Sunday, December 22, 2019

ನಮ್ಮ ಬೆಂಗಳೂರು

ಕೆಲವು ದಿನಗಳ  ಹಿಂದೆ ಅನಿರೀಕ್ಷಿತವಾಗಿ ಗೋವಾಗೆ ಹೋಗಬೇಕಾಗಿ  ಬಂತು. ಯಶವಂತಪುರ ರೈಲು ನಿಲ್ದಾಣದಿಂದ ಸುಮಾರು ಮಧ್ಯಾಹ್ನ  ೨. ೦೦ ಗಂಟೆಗೆ  ವಾಸ್ಕೊಡಿಗಾಮ ಎಕ್ಸ್ ಪ್ರೆಸ್  ಹತ್ತಿದೆ. ನನ್ನ  ಏ.ಸಿ  ಕೋಚಿನಲ್ಲಿ   ಜನ ಕಡಿಮೆ ಇದ್ದರು. ನನ್ನ ಎದುರಿನ ಸೀಟಿನಲ್ಲಿ   ಸುಮಾರು ನನ್ನ ವಯಸ್ಸಿನ ಹೆಂಗಸು ಬಂದು ಕುಳಿತರು. ಆಧುನಿಕ ಉಡುಗೆ ತೊಟ್ಟ ಹೆಂಗಸು, ಕೂದಲು  ಬಾಬ್ ಕಟ್, ಜೀನ್ಸ್ ಪ್ಯಾಂಟು - ಟೀ ಶರ್ಟು  ತೊಟ್ಟಿದ್ದಳು. ನಾನೋ  ಮಧ್ಯಮವರ್ಗದವಳು , ಸ್ವಲ್ಪ ಅಂಜುತ್ತಲೇ ಆಕೆಯ ಜೊತೆ ಮಾತನಾಡಲು ಪ್ರಾರಂಭಿಸಿದೆ. ತುಂಬಾ ಸರಳ ವ್ಯಕ್ತಿತ್ವದ  ಕ್ರೈಸ್ತ ಹೆಂಗಸು, ಒಂದೆರಡು ಮಾತಿನಲ್ಲೇ ಸನಿಹವಾದಳು. ಬಸ್ಸು ರೈಲುಗಳಲ್ಲಿ ಪ್ರಯಾಣ ಮಾಡುವಾಗ ಕಿವಿಗೊಂದು ಇಯರ್  ಫೋನು ಅಂಟಿಸಿಕೊಂಡು ತಮ್ಮಷ್ಟಕ್ಕೆ  ತಾವೇ ಇರುವ ಜನರೇ ಹೆಚ್ಚು. ಹೊಸಬರ ಪರಿಚಯ, ಅವರ ಅಭಿರುಚಿಗಳು ತಿಳಿದುಕೊಳ್ಳುವುದು ಈಗ ತುಂಬಾ ವಿರಳವಾಗಿದೆ. ನಾವು ಪ್ರಯಾಣ ಮಾಡುವ ಸ್ವಲ್ಪ ಹೊತ್ತಾದರೂ  ಬೇರೆಯವರ ಜೊತೆ ಮಾತು ಕತೆ... ಇದೆಲ್ಲ ಈಗಿನ ಸಮಾಜ ಮರೆತೇ ಹೋಗಿದೆ.
ಸರಿ .. ಆ ಹೆಂಗಸಿನ ವಿಷಯಕ್ಕೆ ಬರೋಣ. ಆಕೆ ಮುಂಬೈ ನಲ್ಲಿ ಹುಟ್ಟಿ ಬೆಳೆದು ಈಗ ಆಸ್ಟ್ರೇಲಿಯಾದಲ್ಲಿ  ನೆಲೆಸಿದ್ದಾರಂತೆ. ತಮ್ಮ ಆಪ್ತ ಮಿತ್ರ ರೊಬ್ಬರನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದರು ಅಲ್ಲಿಂದ ತನ್ನ ಗೋವಾದಲ್ಲಿರುವ ಒಂದು  ಆಸ್ತಿಯನ್ನು ಮಾರಲು ಹೊರಟಿದ್ದಳು (ಒಬ್ಬಳೇ). ನನಗೆ ಆಕೆಯನ್ನು ನೋಡಿ ತುಂಬ ಹೆಮ್ಮೆಯಾಯಿತು. ಸ್ತ್ರೀಯರು ಎಷ್ಟು ಧೈರ್ಯವಾಗಿ ಮತ್ತು ಸ್ವಾತಂತ್ರವಾಗಿ ತಮ್ಮ ಎಲ್ಲಾ ಕೆಲಸವನ್ನು   ಮಾಡಿಕೊಳ್ಳುತ್ತಿದ್ದಾರೆ. ಆಕೆ ತಾನು ಅರ್ಥ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ (MA in economics) ಎಂದು ಹೇಳಿದಳು.  ನಾನು, " ಈ ಅರ್ಥ ಶಾಸ್ತ್ರ ನನಗೆ ಅರ್ಥ ಆಗೋಲ್ಲ . ಒಮ್ಮೆ ಮೋದಿ ಹೇಳ್ತಾರೆ ಜಿಡಿಪಿ ಹೆಚ್ಚಾಗ್ತಾ ಇದೆ ಅಂತ..ಮತ್ತೊಮ್ಮೆ ಮನಮೋಹನ್ ಸಿಂಗ್ ಹೇಳ್ತಾರೆ, ದೇಶ  ದುಸ್ಥಿತಿಯಲ್ಲಿದೆ ಅಂತ, ಯಾವುದನ್ನು  ನಂಬುವುದು ತಿಳಿಯೋಲ್ಲ" ಎಂದೆ .  ಅದಕ್ಕೆ ಆಕೆ ಭಾರತದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ, ನಮ್ಮ ಮಕ್ಕಳನ್ನು ವಿದೇಶಕ್ಕೆ ಕಳಿಸಬೇಕು, ಇಲ್ಲಿ ಏನೂ ಇಲ್ಲ ಎಂದುಬಿಟ್ಟಳು.  ನನಗೆ ಸ್ವಲ್ಪ ನಿರಾಸೆಯಾಯಿತು. ನನ್ನ ಮಕ್ಕಳನ್ನು ಹೊರದೇಶಕ್ಕೆ ಕಳುಹಿಸುವ ಉದ್ದೇಶ ಏನೂ ಇಲ್ಲ.  ಆಕೆಯ ಗಂಡ ಹೇಳ್ತಾರಂತೆ, "ಹುಟ್ಟಿದರೆ  ಬೆಕ್ಕು, ನಾಯಿಯಾಗಾದರೂ ಆಸ್ಟ್ರೇಲಿಯಾದಲ್ಲಿ ಹುಟ್ಟಬೇಕು" ಅಂತ. ಎಂತ ವಿಪರ್ಯಾಸ.. ಅಂದು ಪಂಪ ಹೇಳಿದ "ಮರಿ ದುಂಬಿಯಾಗಾದರೂ ಬನವಾಸಿಯಲ್ಲಿ ಹುಟ್ಟಿ ಬರಬೇಕೆಂಬುದು ನನ್ನ ಆಸೆ". ಅಣ್ಣಾವ್ರು " ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು" ಅಂದ್ರು. "ಜಹಾ  ಡಾಲ್ ಡಾಲ್ ಪರ್  ಸೋನೇಕಿ ಚಿಡಿಯಾ ಕರ್ತೀ ಹೈ  ಬಸೇರಾ, ಎಲ್ಲಿ ಮರಗಳ ಕೊಂಬೆ ಕೋಂಬೆಗಳ ಮೇಲೆ ಚಿನ್ನದ ಪಕ್ಷಿಗಳಿವೆಯೋ ಆ ದೇಶ , ಭಾರತ ದೇಶ ನನ್ನದು" ಎಂದರು ನಮ್ಮ ಪೂರ್ವಜರು. ನಿಜಕ್ಕೂ ಎಂಥ ದುಸ್ಥಿತಿ.
ಎಂದಿಗೂ ಸಮವಾಗದ ರಸ್ತೆಯ ಮೇಲಿನ  ಗುಂಡಿಗಳು, ಕಾಮಗಾರಿಗೆಂದು  ಚಪ್ಪಡಿಗಳ ತೆರೆದ    ಚರಂಡಿಗಳು, ಎಲ್ಲೆಲ್ಲೂ ಕಾಣುವ ಕಸದ ರಾಶಿಗಳು . ಗಾರ್ಡನ್ ಸಿಟಿ ಈಗ ಗಾರ್ಬೇಜ್ ಸಿಟಿ ಆಗಿದೆ. ನಾವು ಕೊಡುವ ತೆರಿಗೆ ಹಣ ಎಲ್ಲಿ ಹೋಗುತ್ತದೆ.
ಆಕೆ ಹೇಳಿದರಲ್ಲಿ ತಪ್ಪಿಲ್ಲ, ಆಸ್ಟ್ರೇಲಿಯಾದಲ್ಲಿ ರಸ್ತೆ ಕಾಮಗಾರಿ ಮಾಡಬೇಕಾದರೆ ಸ್ಥಳೀಯರಿಗೆ ವಿಚಾರ ತಿಳಿಸಿ, ಕ್ಷಮೆ ಕೋರಿ, ಒಂದು ಬೋರ್ಡ್ ನೇತುಹಾಕಿ ಬೇಗ ಕೆಲಸವನ್ನು ಚೊಕ್ಕಟವಾಗಿ  ಮುಗಿಸಿ  ಹೋಗುತ್ತಾರಂತೆ. ಅದೇ ನಮ್ಮ ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಚರಂಡಿ ನೀರು ಮನೆಯೊಳಗೆ   ನುಗ್ಗಿದೆ ಎಂದು  ದೂರು ಕೊಟ್ಟರೆ, ಚರಂಡಿಗಳನ್ನೆಲ್ಲ ಒಡೆದು, ಮೇಲಿನ ಕಾಂಕ್ರೀಟ್ ಮುಚ್ಚುಗೆಗಳನ್ನು ತೆಗೆದು,ಹಾಗೆ ಬಿಟ್ಟು ನಿದ್ರಿಸುತ್ತಿದ್ದಾರೆ ನಮ್ಮ ಶಾಸಕರು. ಚರಂಡಿಯಲ್ಲಿ ಅರ್ಧ ಪ್ಲಾಸ್ಟಿಕ್ ಕಸ, ಮಳೆ ಬಂದಾಗ ಅದು  ಬ್ಲಾಕ್ ಆಗದೆ ಏನಾಗುತ್ತದೆ. ಆದರೆ ಇದಕ್ಕೆ ಸರ್ಕಾರ ಮಾತ್ರ ಹೊಣೆಯ? ಇಲ್ಲ ಸಾರ್ವಜನಿಕರಲ್ಲೂ  ಲೋಪಗಳಿವೆ. ವಿದ್ಯಾವಂತರೂ ಎಲ್ಲೆಂದರಲ್ಲಿ ಕಸ ಎಸೆಯುವುದು.  ನಾವು ನಮ್ಮ ಶಾಸಕರು, ಕಾರ್ಪೊರೇಟರ್ ಗಳಿಗಿಂತ ಸೋಮಾರಿಗಳು. ನಮ್ಮ ಕೂಗು ಗಟ್ಟಿಯಾಗಿಲ್ಲ, ಜನರಲ್ಲಿ ಒಗ್ಗಟ್ಟಿಲ್ಲ, ವಿಧಾನಸೌಧ ದಲ್ಲಿ ಕುಳಿತಿರುವ,   ನಮ್ಮ ತೆರಿಗೆ ಹಣವನ್ನು ಅನುಭವಿಸುತ್ತಿರುವ ಪ್ರತಿಯೊಬ್ಬರ ಕಿವಿಗೂ ಕೇಳುವತೆ ಧ್ವನಿ ಏರಿಸಬೇಕು. ಏಳಿ  ಎದ್ದೇಳಿ ... ಈ ಗಾರ್ಬೇಜ್ ಸಿಟಿ ಗಾರ್ಡನ್ ಸಿಟಿ ಆಗುವವರೆಗೂ ನಿದ್ದೆ ಮಾಡಬೇಡಿ. 
ಇದು ನಮ್ಮ ಬೆಂಗಳೂರು, ನಮ್ಮ ರಾಜ್ಯ, ನಮ್ಮ ದೇಶ.. ಇದನ್ನು ಬಿಟ್ಟು ಓಡುವುದು ಎಲ್ಲಿಗೆ ? ಇಲ್ಲಿ ಸವಾಲುಗಳಿವೆ. ಎದಿರಿಸೋಣ ... ಮುಂದೆ .. ಮತ್ತೊಬ್ಬ ಪಂಪ ಹುಟ್ಟಿ ಬಂದು ... " ಆರಂಕುಸ ಮಿಟ್ಟೊಡಂ  ನೆನೆವುದೆನ್ನ ಮನಂ ..  ಬೆಂಗಳೂರು ನಗರಂ" ಎನ್ನಬೇಕು.  ಆ ರೈಲು ಸಂಗಾತಿಯ ವಿಷಯಗಳು ನಿರಾಸೆ ಉಂಟುಮಾಡಿದ್ದು ನಿಜ. ಆದರೆ ಚಿಂತನೆಗೆ ಒಳಪಡಿಸಿದವು.
ಜೈ ಬೆಂಗಳೂರು. ಜೈ ಕರ್ನಾಟಕ , ಜೈ ಭಾರತ.
ಕವಿತಾ ವಿ ರಾವ್

















No comments:

Post a Comment