Friday, January 24, 2020

ದಟ್ಟ ಅಡವಿ

ಈ ದಿನ ನನ್ನ ಮಗಳೊಂದಿಗೆ ಮಾತನಾಡುತ್ತಾ ಬರುತ್ತಿದ್ದೆ. ಹೀಗೆ ಒಂದು ಪ್ರಶ್ನೆ ಕೇಳಿದಳು "ಅಮ್ಮ ಒಬ್ಬ ಹುಡುಗ ದೊಡ್ಡವನಾದ ಮೇಲೆ ವಿದೇಶಕ್ಕೆ ಹೋಗಲು ಆಶಿಸಿದರೆ ತಪ್ಪಾ". ಇದಕ್ಕೆ ನನ್ನ ಉತ್ತರ,  ಅಪ್ಪ ಅಮ್ಮ ಖುಷಿಯಿಂದ ಕಳಿಸಿದರೆ ತಪ್ಪೇನಿಲ್ಲ. ಈ ತಾಯಿ ತಂದೆಯರು ಕಳಿಸಿದ ಮೇಲೆ ದುಃಖ ಪಡುವುದು ಇಷ್ಟವಿಲ್ಲ. ಕಳಿಸುವಾಗ " ನಮ್ಮ ಮಗ ಅಮೆರಿಕಾ ಗೆ ಹೋಗುತ್ತಿದ್ದಾನೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವುದು. ನಂತರ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಮತ್ತೆ ಸ್ವದೇಶಕ್ಕೆ ಮರಳಲು ಇಚ್ಚಿಸದಿದ್ದರೆ ಆಗ ಬೇಸರ ಮಾಡಿಕೊಳ್ಳುವುದು ಇದೆಲ್ಲ ಸರಿಯಲ್ಲ . ವಯಸ್ಸಾದ ಮೇಲೆ , ಮಗ , ಮಗಳು , ಅವರು, ಇವರು ಈ ಬಂಧನಗಳಿಂದ ದೂರ ಹೋಗಬೇಕು. ಹೀಗೆ... ಭಾಷಣ ಹೊಡೆಯುತ್ತಾ ಹೋದೆ. " ಆದರೆ ಅಪ್ಪ ಅಮ್ಮರನ್ನು    ವೃದ್ಧಾಶ್ರಮಕ್ಕೆ ಸೇರಿಸುವುದು ತಪ್ಪಿಲ್ಲ ತಾನೇ " ಎಂದು ಬಿಟ್ಟಳು. ಈಗ ನಾನು ಸಿಕ್ಕಿ ಬಿದ್ದೆ. ನನ್ನ ದೃಷ್ಟಿಯಲ್ಲಿ  ಈ ವೃದ್ಧಾಶ್ರಮಗಳನ್ನು ಬೆಳೆಯಲು ಬಿಡಬಾರದು. ಇವು ಬೆಳೆಯುವುದರಿಂದ, ಅಪ್ಪ ಅಮ್ಮ ನನ್ನು ಅಲ್ಲಿಗೆ ತಳ್ಳುವುದು ಹೆಚ್ಚಾಗುತ್ತಿದೆ. ಇದು ಬಹುದಿನಗಳಿಂದ ನನ್ನ ಅಭಿಪ್ರಾಯ. ನನ್ನ ಮಗಳ ಮತ್ತೊಂದು ಪ್ರಶ್ನೆ ,  " ನಾನು ಸಣ್ಣ ಮಗುವಿದ್ದಾಗ , ನಿನಗೆ ನೋಡಿಕೊಳ್ಳಲು ಆಗುತ್ತಿಲ್ಲ ಎಂದು  ನನ್ನನ್ನು ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟಿರಲಿಲ್ಲವಾ.   ಈಗ ನಾನು ತಬ್ಬಿಬ್ಬಾದೆ. ಹೌದು, ಮಹಿಳೆಯರು ಸ್ವಾತಂತ್ರ ಬಯಸುತ್ತಾ , ಉದ್ಯೋಗ ಮಾಡುತ್ತಾ  ಮಕ್ಕಳನ್ನು  ಪರರ ಬಳಿ ಬಿಟ್ಟಲ್ಲಿ ಇರದ ತಪ್ಪು ಅವರು ದೊಡ್ಡವರಾಗಿ ನಮ್ಮನ್ನು ಪರರ ಬಳಿ ಬಿಟ್ಟರೇನು ತಪ್ಪು. ಈಗ ಮನು ಸ್ಮೃತಿ ನೆನಪಾಗುತ್ತದೆ. " ಸ್ತ್ರೀಯರಿಗೆ ಸ್ವಾತಂತ್ರ್ಯ ಬೇಡ , ವಿದ್ಯೆ ಬೇಡ " ಅಂದದ್ದು ಇದಕ್ಕೆ ಇರಬಹುದು. ಈ ಪ್ರಶ್ನೆಗೆ ಉತ್ತರ ಸಿಗದೇ " ಬಂದದ್ದೆಲ್ಲಾ ಬರಲಿ ಗೋವಿಂದನ ದಯೆವೊಂದಿರಲಿ" ಎಂದು ಜಪಿಸುವುದನ್ನು ಬಿಟ್ಟು ಇನ್ನೇನೂ ಉಳಿದಿಲ್ಲ. ಜೀವನದಲ್ಲಿ ಅದು ಬೇಕು ಇದು ಬೇಕು ಎಂಬ ಓಟದಲ್ಲಿ  ಹಿಂತಿರುಗಿ ಹೋಗಲಾರದ , ಮುಂದೆ ಸಾಗಲಾಗದ ದಟ್ಟ ಅಡವಿಗೆ ಬಂದು ನಿಂತುಬಿಟ್ಟಿದ್ದೇನೆ. 

Tuesday, January 14, 2020

ಸಂಕ್ರಾಂತಿ

ದಿಕ್ಕು ಬದಲಿಸಿದನಿಂದು ಭಾಸ್ಕರ
 ಬಿಟ್ಟು   ಧನುರಾಶಿಯ ಸೇರುತ   ಮಕರ

ರಥವನೇರಿ  ಸಾಗುತಿಹ  ದಿವ್ಯ ತೇಜದಿ ರವಿ
ಹಾದಿಯುದ್ದಕ್ಕೂ ರಂಗಿನ ರಂಗವಲ್ಲಿಯ ಹರವಿ

ಸುಗ್ಗಿಯ ಕುಣಿತದಿ  ಭಾಗಿಯಾದನಿಂದು ಸೂರ್ಯ
ಹಿಗ್ಗುತ ಮುನ್ನಡೆಯುತಿಹ  ಬೀರುತ  ಸೌಂಧರ್ಯ

ನದಿಗಳಲಿ  ಮಿಂದವರಿಗೆ ಚಂದದಿ  ಕಂಡ ಆದಿತ್ಯ
ಹಳ್ಳಿಯಿಂದ ದಿಲ್ಲಿಯ ನಾಗರಿಕರಿಗಿವನ ಕಾಂತಿ ಅತ್ಯಗತ್ಯ

ಎಳ್ಳು- ಬೆಲ್ಲವ ಬೀರುವರೊಡಗೂಡಿ ದಿವಾಕರ
ಎಲ್ಲರಿಗೆ ಕೃಪೆದೋರಲಿ  ಬಾಂದಳದ ಕರುಣಾಕರ

ಅದೋ ತಿಮಿರವ ನುಂಗಿ  ನಲಿದಿಹ  ಹಿರಣ್ಯಗರ್ಭ
ಮಕರಜ್ಯೋತಿಯ ಸೂಸಿಹ ಸ್ವಾಮಿ   ಶರಣಮಯ್ಯಪ್ಪ

ಮಂದದಿ  ಮುಂದೆ   ಸಾಗಿದ  ಶನಿದೇವರ   ಪಿತ
ಪಾಂಡುರಂಗನ ಪರಮ ಭಕ್ತರಿಗೆ ಅಭಯ ಹಸ್ತವನಿತ್ತ

ಗೂಳಿಗಳ  ಗುದ್ದಾಟಗಳ ನಡುವೆ ವಿವಸ್ವಾನ್
 ಗೋವುಗಳ ಮಿಂಚುಬಳ್ಳಿಗಳಿಂದ ಸಿಂಗರಿಸಿದ ಅಂಶುಮಾನ್

ಸಂಜೆಯ ಸಮಯಕೆ  ತನ್ನ ಸ್ವಸ್ಥಾನಕೆ   ತೆರಳಿದ ಮಿತ್ರಾ
ಸಂಭ್ರಮದಿ ಹರಸಿ, ಸ್ವೀಕರಿಸಿ  ಸಂಕ್ರಾಂತಿಯ ಸಡಗರ

ಎಲ್ಲರಲಿ ಸಂತಸ  ಸ್ಫುರಿಸಿತು   ಸಂಕ್ರಾಂತಿ
ಎಲ್ಲೆಡೆ ಪಸರಿಸಲಿ ಸುಖ   ಶಾಂತಿ







ಸಂಕ್ರಾಂತಿ

ರಂಗೋಲಿ ಬಿಡಿಸಲು
ಮನೆಯ ಮುಂದೆ
ಜಾಗವಿಲ್ಲ

ಗಾಳಿಪಟವ ಹಾರಿಸಲು
ಊರ ಒಳಗೆ
ಮೈದಾನವಿಲ್ಲ

ಗೋವುಗಳ ಸಿಂಗರಿಸಲು
 ದೇಶೀ  ದನಗಳ
ಸುಳಿವಿಲ್ಲ

ಎಳ್ಳು ಬೆಲ್ಲ ಬೀರಲು
ಹೆಣ್ಣುಮಕ್ಕಳು
ಸಿದ್ಧವಿಲ್ಲ

ಪೊಂಗಲ್ ಮಾಡಲು
ಮಹಿಳೆಯರಿಗೆ
ಬರುವುದಿಲ್ಲ

ಸಕ್ಕರೆ ಅಚ್ಚು ಮಾಡುವ
 ಅಜ್ಜಿಯರು 
ಇಂದು ಇಲ್ಲ

ಕಬ್ಬು ಜಗಿಯಲು
ಹಲ್ಲುಗಳಿಗೆ
ಶಕ್ತಿಯಿಲ್ಲ

ಪಿಜ್ಜಾ ಬರ್ಗರ್
 ಸ್ವಿಗೀ  ಜ್ಯೋಮ್ಯಾಟೋಗಳೇ
ಇಲ್ಲೆಲ್ಲಾ

ಬೆಂಗಳೂರಿನಲ್ಲಿ
ಸಂಕ್ರಾಂತಿ ಹಬ್ಬ
ಇಲ್ಲವೇ ಇಲ್ಲ



Monday, January 13, 2020

ಜೆ ಏನ್ ಯು ಹಗರಣ

ಹಲವು ದಿನಗಳಿಂದ ಜೆ ಏನ್ ಯು  ಹಗರಣ ಕೇಳುತ್ತಾ ಬರುತ್ತಿದ್ದೇನೆ. ಇಲ್ಲಿ ತಪ್ಪು ಎಡಪಂತದವರದ್ದಾ , ಬಲಪಂತದವರದ್ದಾ  ಎಂಬ ಚರ್ಚೆ ದೇಶದಾದ್ಯಂತ ನಡೆಯುತ್ತಿದೆ. ನನ್ನ ಮಟ್ಟಿಗೆ ಇಬ್ಬರದೂ ತಪ್ಪಲ್ಲ, ಎರಡು ಸಿದ್ಧಾಂತಗಳ ನಡುವಿನ  ಹೋರಾಟ. ಪ್ರತಿಯೊಬ್ಬ ತನ್ನ ಸಿದ್ಧಾಂತವೇ ಸರಿ ಎಂದು ಮತ್ತೊಂದು ತಪ್ಪು ಎಂದು ವಾದಿಸುತ್ತಾನೆ. ತನ್ನ ಸಿದ್ದಾಂತವನ್ನು ಎಷ್ಟು ಬಲವಾಗಿ ನಂಬಿದ್ದಾನೆಂದರೆ, ಅದನ್ನು ಟೀಕಿಸಿದವನ ತಲೆ ಒಡೆದು ಹಾಕುವಷ್ಟು ಸಿಟ್ಟು. ಇದನ್ನೇ ಗೀತೆಯಲ್ಲಿ (೨. ೬೩) ಶ್ರೀ ಕೃಷ್ಣ ಹೇಳಿರೋದು. "ಕ್ರೋಧಾತ್ ಭವತಿ ಸಮ್ಮೋಹ: . ... ". ಕೋಪದಿಂದ ಮನುಷ್ಯ ಸಂಮೋಹಕ್ಕೊಳಗಾಗುತ್ತಾನೆ, ಸಂಮೋಹದಿಂದ ಸ್ಮೃತಿ ಭ್ರಮೆಯಾಗಿ .. ಅದರಿಂದ ಬುದ್ದಿ ನಾಶವಾಗಿ ಪತನಗೊಳ್ಳುತ್ತಾನೆ.  
ಉದಾಹರಣೆಗೆ , ನಾನು ಸಸ್ಯಾಹಾರಿ, ನನ್ನ  ಗೆಳೆಯ ಮಾಂಸಾಹಾರಿ ಅಂತ ಇಟ್ಟುಕೊಳ್ಳಿ,  ಆಗ ಏನೋ ಪುಳಿಚಾರ್ ಅಂತ  ಅವನು ಹಾಸ್ಯ ಮಾಡಿದ್ರೆ, ಖಂಡಿತ ನನಗೆ ಕೋಪ ಬರುತ್ತದೆ. ಕೆಲವು ವರ್ಷಗಳ  ಹಿಂದೆ ಒಬ್ಬ ಪುಣ್ಯಾತ್ಮ " ನಾನು ದೇವರ ವಿಗ್ರಹದ ಮೇಲೆ ಮೂತ್ರ ವಿಸರ್ಜನೆ ಮಾಡಿದೆ ನನಗೆ ಏನೂ ಆಗಲಿಲ್ಲ" ಎಂದು ಬಿಟ್ಟ. ಮೂರ್ತಿಯಲ್ಲಿ ದೇವರನ್ನು ಕಾಣುವವರಿಗೆ ಸಿಟ್ಟು ಬಂದು ಆತನನ್ನು ಮುಗಿಸಿಬಿಟ್ಟರು. ಇಲ್ಲಿ ಒಂದು ವಿಷಯ ಚೆನ್ನಾಗಿ ಗಮನಿಸಬೇಕು. ಒಂದು ಸಿದ್ಧಾಂತ ನಮಗೆ  ಇಷ್ಟವಿಲ್ಲದಿದ್ದ ಮಾತ್ರಕ್ಕೆ ಅದನ್ನು ಅಷ್ಟು ಕೀಳಾಗಿ ಕಂಡು ಹೀಯಾಳಿಸುವ ಅಗತ್ಯವಿಲ್ಲ. ನಂಬಲ್ಲ ಅಂದ್ರೆ ಬಿಡು, ಆದ್ರೆ ಅದನ್ನು ಅತಿರೇಕಕ್ಕೆ ತೆಗೆದುಕೊಂಡು  ಹೋಗುವ ಅಗತ್ಯ ಇಲ್ಲ.  ಜೆ.ಏನ್ ಯು ನಲ್ಲಿ ನಡೆದದ್ದು ಇಷ್ಟೇ.. ಟೀಕೆ ಆರೋಪಗಳು ಎಷ್ಟು ಹೆಚ್ಚಿತೆಂದರೆ, ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಏರಿತು. ಈ ಇಬ್ಬರ ಜಗಳ ಮತ್ತೊಬ್ಬರಿಗೆ ಲಾಭವಾಯಿತು. ಅದೇ ಮೀಡಿಯಾ. ಇಬ್ಬರನ್ನು... ತಮ್ಮ ಸ್ಟುಡಿಯೋದಲ್ಲಿ ಕೂರಿಸಿ .. ಇಬ್ಬರನ್ನು ಕೆಣಕಿ, ಜಗಳ ಮಾಡಲು ಬಿಟ್ಟು .. ತಾವು ಆಟ  ನೋಡುತ್ತಾ ಇದ್ದಾರೆ.  
ಇವ್ಯಾವುದಕ್ಕೂ  ವಿಚಲಿತರಾಗದೆ ಇರೋದೇ ಒಳ್ಳೆಯದು. ಕಾದಾಡೋ ಅಷ್ಟು ದಿನ ಕಾದಾಡಲಿ, ಸುಸ್ತಾದಮೇಲೆ ಅವರೇ ಸುಮ್ಮನಾಗ್ತಾರೆ.  Let us not get excited and argue. 

Thursday, January 9, 2020

ಇಂದ್ರಿಯ ಭೋಗ

ಹೊಸ ವರ್ಷವನ್ನು ಸ್ವಾಗತಿಸಲು   ಫೈವ್ ಸ್ಟಾರ್ ಹೋಟೆಲ್ ನಲ್ಲಿ  ಒಂದು ಪಾರ್ಟಿ ಏರ್ಪಾಡಾಗಿತ್ತು.  ರಾಜೇಶ್ ಗೆ ಆ ಪಾರ್ಟಿ ಯಲ್ಲಿ ಭಾಗವಹಿಸಲು ಆಫೀಸಿನಿಂದ  ಎರಡು ಪಾಸ್ ಗಳು ದೊರೆತವು. ಡಿಸಂಬರ್ ೩೧ ರಾತ್ರಿ ತನ್ನ ಹೆಂಡತಿಯನ್ನು ಕರೆದುಕೊಂಡು ಹೋದನು. ಇಬ್ಬರೂ ಪಾರ್ಟಿ ಡ್ರೆಸ್ ಗಳನ್ನು  ಹಾಕಲು ಮರೆಯಲಿಲ್ಲ. ರಾತ್ರಿ ಕುಣಿತ ..ಕುಡಿತ .. ಎಲ್ಲ ಶುರುವಾದವು. ರಾಜೇಶ್  ಉಚಿತವಾಗಿ ದೊರಕಿತೆಂದು ಸ್ವಲ್ಪ ಹೆಚ್ಚಾಗೇ ಕುಡಿದ. ಮಧ್ಯದಲ್ಲಿ ಬರುತ್ತಿದ್ದ ಗೋಬಿ ಮಂಚೂರಿ, ಪನ್ನೀರ್ ಟೀಕಾ  ಇತ್ಯಾದಿಗಳನ್ನು ನಾಲಿಗೆ ಚಪ್ಪರಿಸಿಕೊಳ್ಳುತ್ತ ತಿನ್ನುತ್ತಿದ್ದ. ಸ್ವಲ್ಪ ಹೊತ್ತಿನ ನಂತರ ಶೌಚಾಲಯಕ್ಕೆ ಹೋಗಬೇಕೆನಿಸಿತು,  ಹೋಗುವಾಗ  ದಾರಿಯಲ್ಲಿ ಇಬ್ಬರು ಸರ್ವರ್ ಗಳು ಮರಾಠಿ ಭಾಷೆಯಲ್ಲಿ ಮಾತನಾಡುವುದು ಕೇಳಿಸಿತು. ರಾಜೇಶ್ ಬೆಂಗಳೂರಿಗೆ ಬರುವ ಮುನ್ನ ನಾಗಪುರದಲ್ಲಿ ೩ ವರ್ಷ ಕೆಲಸ ಮಾಡಿದ ಕಾರಣ ಮರಾಠಿ ಅರ್ಥವಾಗುತ್ತಿತ್ತು. ಒಬ್ಬ ಸರ್ವರ್  ಹೇಳಿದ " ಏಯ್ ನಿನ್ನೆದಲ್ಲ.. ಮೊನ್ನೆಯ ಗೋಭಿ  ತೆಗೆದುಕೊಂಡು ಬಾ" ಅಂತ. ಅವರ ಸಂಭಾಷಣೆ ಕೇಳುತ್ತ
ರಾಜೇಶ್ ಗೆ   ಏರಿದ್ದ ಮತ್ತೆಲ್ಲ ಒಮ್ಮೆ ಇಳಿಯಿತು. ಸ್ವಲ್ಪ ಆಲೋಚನೆ ಮಾಡಿ , ಒಮ್ಮೆಗೆ ಹೆಚ್ಚುಮಂದಿ ಅತಿಥಿಗಳು ಬರುತ್ತಾರೆಂದರೆ, ಅದಕ್ಕೆ ಊಟದ ತಯಾರಿ ಎರಡು ದಿನಗಳಿಂದಲೇ ಆಗಿರುತ್ತದೆ. ಕೆಲಸಗಾರರು ಅಷ್ಟೇ ಮಂದಿ, ಅತಿಥಿಗಳು ಹೆಚ್ಚು ಎಂದರೆ, ಆ ಹೋಟೆಲ್ ಮಾಲಿಕ ಏನು ಮಾಡಬೇಕು. ಉಳಿದದ್ದು ಪಳಿದದ್ದೆಲ್ಲ ಸ್ವಲ್ಪ ಬಿಸಿ ಮಾಡಿ, ಕುಡಿದು ಅಮಲೇರಿರುವವರಿಗೆ ಬಡಿಸಿ ತನ್ನ ಜೇಬು ತುಂಬಿಸಿಕೊಳ್ಳುತ್ತಾನೆ. ಎಚ್ಚರವಾದ ರಾಜೇಶ್ ಎಲ್ಲವನ್ನೂ ವಾಂತಿಮಾಡಿಬಿಟ್ಟ.
ಸ್ನೇಹಿತರೆ, ಇಂದ್ರಿಯ ಭೋಗಗಳು ಇದೇ  ರೀತಿಯದ್ದು.. ಕ್ಷಣಿಕ ಸುಖ ಕೊಡುತ್ತದೆ. ಅದರಿಂದ ಹೊರಗೆ ಬರಬೇಕು, ಈ ಭೋಗಗಳ ಬಗ್ಗೆ ಇರುವ ಆಸೆ , ವ್ಯಾಮೋಹಗಳನ್ನು ವಾಂತಿ ಮಾಡಬೇಕು. ಇದನ್ನೇ ಶ್ರೀ ಕೃಷ್ಣ ಗೀತೆಯ ಐದನೇ ಅಧ್ಯಾಯದಲ್ಲಿ ಹೇಳಿರಿವುದು (೫. ೨೨). ಈ ರೀತಿಯ ಇಂದ್ರಿಯ ಸುಖಗಳು ದುಃಖಕ್ಕೆ ಕಾರಣವಾಗುವುದರಿಂದ ವಿವೇಕಿಯಾದವನು  ಇವುಗಳಿಂದ ದೂರವಿರುತ್ತಾನೆ. 
ಹರೇ ಕೃಷ್ಣ
KVR

ಸಂಕಲ್ಪ

ಕಲ್ಕಿಯು  ಹುಟ್ಟಿಬರಲೀ
ಕಲಿಯುಗದಲಿ
ಕಾಮೋದ್ರೇಕದ ಕಂಗಳ
ಕಿತ್ತೆಸೆಯಲಿ
ಕ್ಷಣಿಕ ಮುಂಗೋಪವ
ಕ್ಷೀಣಿಸಲಿ
ಕ್ಷುಲ್ಲಕಗಳನಾಲಿಸುವ  ಕಿವಿಗಳ
ಕತ್ತರಿಸಲಿ
ಕಿಚ್ಚಿನಿಂ ಹೊತ್ತಿಸಿದ ಕಾಳ್ಗಿಚ್ಚ
ನಂದಿಸಲಿ
ಕಾಯದ  ಮೇಲಿನ ವ್ಯಾಮೋಹವ
ಕಡೆಗಾಣಿಸಲಿ
ಕನಕವ ದುರಾಸೆಯಿಂ ಗಳಿಸಿದರದನು
ಕಲ್ಲಾಗಿಸಲಿ
ಮದದಿಂ ಜರಿಯುವ ನಾಲಿಗೆಯ
ತುಂಡರಿಸಲಿ
ಒಟ್ಟಿನಲಿ  ಷಟ್ ವರ್ಗಗಳು ಪಂಚೇದ್ರಿಯಗಳು   ಸೇರಿ
ಏಕಾದಶರಾಗಿ ಆಡುವ ಆಟ ..
ಅವುಗಳ ನಿಯಂತ್ರಿಸುವ ಸೆಣಸಾಟವೇ
ಈ  "ಟ್ವೆಂಟಿ - ಟ್ವೆಂಟಿ "
ಇದ ಜಯಿಸುವ ಸಂಕಲ್ಪದೊಂದಿಗೆ
ಸ್ವಾಗತಿಸೋಣ ಹೊಸ ವರುಷ - ಟ್ವೆಂಟಿ - ಟ್ವೆಂಟಿ

Saturday, January 4, 2020

ಕೃಷ್ಣ

ಕೃಷ್ಣ  ಎಂದರೆ  ಎಲ್ಲರನ್ನು ಆಕರ್ಷಿಸುವವನು. ಭೂಮಿಗೂ ಆಕರ್ಷಣ ಶಕ್ತಿ ಇದೆ. ಭೂಮಿ ಮೇಲಕ್ಕೆ ಹೋದವರನ್ನು ಕೆಳಕ್ಕೆ ಎಳೆಯುತ್ತದೆ. ಕೃಷ್ಣ ಕೆಳಕ್ಕೆ ಬಿದ್ದವರನ್ನು ಮೇಲಕ್ಕೆ ಎತ್ತುತ್ತಾನೆ .
ಪೇಜಾವರ ಶ್ರೀ