Thursday, January 9, 2020

ಇಂದ್ರಿಯ ಭೋಗ

ಹೊಸ ವರ್ಷವನ್ನು ಸ್ವಾಗತಿಸಲು   ಫೈವ್ ಸ್ಟಾರ್ ಹೋಟೆಲ್ ನಲ್ಲಿ  ಒಂದು ಪಾರ್ಟಿ ಏರ್ಪಾಡಾಗಿತ್ತು.  ರಾಜೇಶ್ ಗೆ ಆ ಪಾರ್ಟಿ ಯಲ್ಲಿ ಭಾಗವಹಿಸಲು ಆಫೀಸಿನಿಂದ  ಎರಡು ಪಾಸ್ ಗಳು ದೊರೆತವು. ಡಿಸಂಬರ್ ೩೧ ರಾತ್ರಿ ತನ್ನ ಹೆಂಡತಿಯನ್ನು ಕರೆದುಕೊಂಡು ಹೋದನು. ಇಬ್ಬರೂ ಪಾರ್ಟಿ ಡ್ರೆಸ್ ಗಳನ್ನು  ಹಾಕಲು ಮರೆಯಲಿಲ್ಲ. ರಾತ್ರಿ ಕುಣಿತ ..ಕುಡಿತ .. ಎಲ್ಲ ಶುರುವಾದವು. ರಾಜೇಶ್  ಉಚಿತವಾಗಿ ದೊರಕಿತೆಂದು ಸ್ವಲ್ಪ ಹೆಚ್ಚಾಗೇ ಕುಡಿದ. ಮಧ್ಯದಲ್ಲಿ ಬರುತ್ತಿದ್ದ ಗೋಬಿ ಮಂಚೂರಿ, ಪನ್ನೀರ್ ಟೀಕಾ  ಇತ್ಯಾದಿಗಳನ್ನು ನಾಲಿಗೆ ಚಪ್ಪರಿಸಿಕೊಳ್ಳುತ್ತ ತಿನ್ನುತ್ತಿದ್ದ. ಸ್ವಲ್ಪ ಹೊತ್ತಿನ ನಂತರ ಶೌಚಾಲಯಕ್ಕೆ ಹೋಗಬೇಕೆನಿಸಿತು,  ಹೋಗುವಾಗ  ದಾರಿಯಲ್ಲಿ ಇಬ್ಬರು ಸರ್ವರ್ ಗಳು ಮರಾಠಿ ಭಾಷೆಯಲ್ಲಿ ಮಾತನಾಡುವುದು ಕೇಳಿಸಿತು. ರಾಜೇಶ್ ಬೆಂಗಳೂರಿಗೆ ಬರುವ ಮುನ್ನ ನಾಗಪುರದಲ್ಲಿ ೩ ವರ್ಷ ಕೆಲಸ ಮಾಡಿದ ಕಾರಣ ಮರಾಠಿ ಅರ್ಥವಾಗುತ್ತಿತ್ತು. ಒಬ್ಬ ಸರ್ವರ್  ಹೇಳಿದ " ಏಯ್ ನಿನ್ನೆದಲ್ಲ.. ಮೊನ್ನೆಯ ಗೋಭಿ  ತೆಗೆದುಕೊಂಡು ಬಾ" ಅಂತ. ಅವರ ಸಂಭಾಷಣೆ ಕೇಳುತ್ತ
ರಾಜೇಶ್ ಗೆ   ಏರಿದ್ದ ಮತ್ತೆಲ್ಲ ಒಮ್ಮೆ ಇಳಿಯಿತು. ಸ್ವಲ್ಪ ಆಲೋಚನೆ ಮಾಡಿ , ಒಮ್ಮೆಗೆ ಹೆಚ್ಚುಮಂದಿ ಅತಿಥಿಗಳು ಬರುತ್ತಾರೆಂದರೆ, ಅದಕ್ಕೆ ಊಟದ ತಯಾರಿ ಎರಡು ದಿನಗಳಿಂದಲೇ ಆಗಿರುತ್ತದೆ. ಕೆಲಸಗಾರರು ಅಷ್ಟೇ ಮಂದಿ, ಅತಿಥಿಗಳು ಹೆಚ್ಚು ಎಂದರೆ, ಆ ಹೋಟೆಲ್ ಮಾಲಿಕ ಏನು ಮಾಡಬೇಕು. ಉಳಿದದ್ದು ಪಳಿದದ್ದೆಲ್ಲ ಸ್ವಲ್ಪ ಬಿಸಿ ಮಾಡಿ, ಕುಡಿದು ಅಮಲೇರಿರುವವರಿಗೆ ಬಡಿಸಿ ತನ್ನ ಜೇಬು ತುಂಬಿಸಿಕೊಳ್ಳುತ್ತಾನೆ. ಎಚ್ಚರವಾದ ರಾಜೇಶ್ ಎಲ್ಲವನ್ನೂ ವಾಂತಿಮಾಡಿಬಿಟ್ಟ.
ಸ್ನೇಹಿತರೆ, ಇಂದ್ರಿಯ ಭೋಗಗಳು ಇದೇ  ರೀತಿಯದ್ದು.. ಕ್ಷಣಿಕ ಸುಖ ಕೊಡುತ್ತದೆ. ಅದರಿಂದ ಹೊರಗೆ ಬರಬೇಕು, ಈ ಭೋಗಗಳ ಬಗ್ಗೆ ಇರುವ ಆಸೆ , ವ್ಯಾಮೋಹಗಳನ್ನು ವಾಂತಿ ಮಾಡಬೇಕು. ಇದನ್ನೇ ಶ್ರೀ ಕೃಷ್ಣ ಗೀತೆಯ ಐದನೇ ಅಧ್ಯಾಯದಲ್ಲಿ ಹೇಳಿರಿವುದು (೫. ೨೨). ಈ ರೀತಿಯ ಇಂದ್ರಿಯ ಸುಖಗಳು ದುಃಖಕ್ಕೆ ಕಾರಣವಾಗುವುದರಿಂದ ವಿವೇಕಿಯಾದವನು  ಇವುಗಳಿಂದ ದೂರವಿರುತ್ತಾನೆ. 
ಹರೇ ಕೃಷ್ಣ
KVR

No comments:

Post a Comment