Tuesday, January 14, 2020

ಸಂಕ್ರಾಂತಿ

ದಿಕ್ಕು ಬದಲಿಸಿದನಿಂದು ಭಾಸ್ಕರ
 ಬಿಟ್ಟು   ಧನುರಾಶಿಯ ಸೇರುತ   ಮಕರ

ರಥವನೇರಿ  ಸಾಗುತಿಹ  ದಿವ್ಯ ತೇಜದಿ ರವಿ
ಹಾದಿಯುದ್ದಕ್ಕೂ ರಂಗಿನ ರಂಗವಲ್ಲಿಯ ಹರವಿ

ಸುಗ್ಗಿಯ ಕುಣಿತದಿ  ಭಾಗಿಯಾದನಿಂದು ಸೂರ್ಯ
ಹಿಗ್ಗುತ ಮುನ್ನಡೆಯುತಿಹ  ಬೀರುತ  ಸೌಂಧರ್ಯ

ನದಿಗಳಲಿ  ಮಿಂದವರಿಗೆ ಚಂದದಿ  ಕಂಡ ಆದಿತ್ಯ
ಹಳ್ಳಿಯಿಂದ ದಿಲ್ಲಿಯ ನಾಗರಿಕರಿಗಿವನ ಕಾಂತಿ ಅತ್ಯಗತ್ಯ

ಎಳ್ಳು- ಬೆಲ್ಲವ ಬೀರುವರೊಡಗೂಡಿ ದಿವಾಕರ
ಎಲ್ಲರಿಗೆ ಕೃಪೆದೋರಲಿ  ಬಾಂದಳದ ಕರುಣಾಕರ

ಅದೋ ತಿಮಿರವ ನುಂಗಿ  ನಲಿದಿಹ  ಹಿರಣ್ಯಗರ್ಭ
ಮಕರಜ್ಯೋತಿಯ ಸೂಸಿಹ ಸ್ವಾಮಿ   ಶರಣಮಯ್ಯಪ್ಪ

ಮಂದದಿ  ಮುಂದೆ   ಸಾಗಿದ  ಶನಿದೇವರ   ಪಿತ
ಪಾಂಡುರಂಗನ ಪರಮ ಭಕ್ತರಿಗೆ ಅಭಯ ಹಸ್ತವನಿತ್ತ

ಗೂಳಿಗಳ  ಗುದ್ದಾಟಗಳ ನಡುವೆ ವಿವಸ್ವಾನ್
 ಗೋವುಗಳ ಮಿಂಚುಬಳ್ಳಿಗಳಿಂದ ಸಿಂಗರಿಸಿದ ಅಂಶುಮಾನ್

ಸಂಜೆಯ ಸಮಯಕೆ  ತನ್ನ ಸ್ವಸ್ಥಾನಕೆ   ತೆರಳಿದ ಮಿತ್ರಾ
ಸಂಭ್ರಮದಿ ಹರಸಿ, ಸ್ವೀಕರಿಸಿ  ಸಂಕ್ರಾಂತಿಯ ಸಡಗರ

ಎಲ್ಲರಲಿ ಸಂತಸ  ಸ್ಫುರಿಸಿತು   ಸಂಕ್ರಾಂತಿ
ಎಲ್ಲೆಡೆ ಪಸರಿಸಲಿ ಸುಖ   ಶಾಂತಿ







No comments:

Post a Comment