
ನಿನ್ನೆ ನನ್ನ ಸಹೋದ್ಯೋಗಿಗಳ ಜೊತೆ ಶ್ರೀರಂಗಪಟ್ಟಣಕ್ಕೆ ಹೋಗಿದ್ದೆ. ನನ್ನ ನೆನಪುಗಳು ೨೫ವರ್ಷಗಳ ಹಿಂದಕ್ಕೆ ಹೋಯಿತು. ನಾನು ವಿದ್ಯಾಮಂದಿರದಲ್ಲಿ ಏಳನೆಯ ತರಗತಿಯಲ್ಲಿ ಓದುತ್ತಿದ್ದ ದಿನಗಳು. ಶಾಲೆಯಿಂದ ಮೈಸೂರು ಪ್ರವಾಸಕ್ಕೆ ಹೋಗಿದ್ದೆವು. ಬಸ್ಸಿನಲ್ಲಿ ನಾನು, ಭುವನೇಶ್ವರಿ, ವಿಜಯಲಕ್ಷ್ಮಿ ಒಟ್ಟಿಗೆ ಕುಳಿತಿದ್ದೆವು.ಮಾತು ... ಮಾತು ಎಷ್ಟು ಹೊತ್ತಾದರೂ ತೀರದ ಮಾತುಗಳು. ವಿಡಿಯೋ ಕೋಚ್ ಬಸ್ಸಿನಲ್ಲಿ "ಮುಕದ್ದರ್ ಕಾ ಸಿಕಂದರ್" ಸಿನೆಮಾ ಹಾಕಿದ್ದರು. ರಂಗನತಿಟ್ಟು ಪಕ್ಷಿಧಾಮ, ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟ, ಚರ್ಚ್ , ಮೈಸೂರು ಅರಮನೆ ಎಲ್ಲಾ ನೋಡಿದೆವು. ಹೋದಲ್ಲೆಲ್ಲಾ ಸಿಕ್ಕಿದ್ದು ಕೊಂಡುಕೊಂಡು ತಿಂದೆವು. ಸೌತೆಕಾಯಿ, ಐಸ್ ಕ್ಯಾಂಡಿ , ಹೀಗೆ ಮಜಾ ಮಾಡುತ್ತಾ ಸಂಜೆ ಕೆ.ಆರ್.ಎಸ್ ಗೆ ಹೋದೆವು. ಕತ್ತಲೆ ಯಾಗಿತ್ತು. ಬಣ್ಣ ಬಣ್ಣದ ನೀರಿನ ಕಾರಂಜಿಗಳು ಮೊಡಿಮಾಡಿದವು. ಇನ್ನೇನು ಬಸ್ಸು ಹತ್ತಬೇಕು, ನಮ್ಮಲ್ಲಿ ಒಂದು ಹುಡುಗಿ ಕಾಣೆಯಾಗಿದ್ದಳು. ಜಯ ವಿಜಯ ಅಂತ ಇಬ್ಬರು ಅವಳಿ ಜವಳಿ ಹುಡುಗಿಯರಿದ್ದರು ಅವರಲ್ಲಿ ಒಬ್ಬಳು ಕಾಣೆಯಾಗಿದ್ದಳು. ಸ್ವಲ್ಪ ಹುಡುಕಾಟ, ತಲೆಬಿಸಿಗಳ ನಂತರ ಸಿಕ್ಕಳು. ರಾತ್ರಿ ಹೋಟೆಲಿನಲ್ಲಿ ಊಟ ಮಾಡಿ ಮಧ್ಯ ರಾತ್ರಿ ಬೆಂಗಳೂರಿಗೆ ಬಂದು ಸೇರಿದೆವು. ಮರುದಿನ ಶಾಲೆಗೆ ರಜೆ ಇತ್ತು ಅದರ ಮರುದಿನ ಶಾಲೆಗೆ ಹೋದೆವು. ಮೊದಲನೆಯ ಪಿರಿಯೆಡ್ , DK ಟೀಚರ್ ಬೋರ್ಡಿನ ಮೇಲೆ ಬರೆದರು , " ತಿನ್ನಲು ಬದುಕು - ಬದುಕಲು ತಿನ್ನು". ಪ್ರವಾಸಕ್ಕೆ ಹೋದಾಗ ಸಿಕ್ಕ ಸಿಕ್ಕದ್ದೆಲ್ಲ ತಿನ್ನದ್ದಕ್ಕೆ , ನಾವು ಬದುಕಲು ತಿನ್ನಬೇಕೋ ಅಥವಾ ತಿನ್ನಲಿಕ್ಕೆ ಬದುಕಬೇಕೋ ಸರಿಯಾಗಿ ಪಾಠ ಮಾಡಿದರು. ಎಷ್ಟು ಸತ್ಯ ? ಕೆಲವೊಮ್ಮೆ ನಾವು ಜಂಕ್ ಫುಡ್ ಗಳನ್ನೂ ತಿನ್ನಲೇ ಹುಟ್ಟಿದ್ದೇವೋ ಎಂಬಂತೆ ತಿನ್ನುತ್ತೇವೆ. ಈಗ ಅಂತಹ ವಿಷಯಗಳನ್ನೂ ಹೇಳಿಕೊಡಲು ಯಾರೂ ಇಲ್ಲ, ಕೇಳಲೂ ಯಾರೂ ಇಲ್ಲ. ಪಠ್ಯಪುಸ್ತಕಗಳ ಜೊತೆ ಜೀವನದಲ್ಲಿ ಹೇಗಿರಬೇಕೋ ಅದನ್ನೆಲ್ಲಾ ಕಲಿಸುತ್ತಿದ್ದವರು ನಮ್ಮ ಟೀಚರ್.
ನಮ್ಮ ಶಾಲೆಯ ೫೦ ನೆಯ ವಾರ್ಷಿಕೋತ್ಸವ. golden jublee celebrations. ಮೊನ್ನೆ .... ಅಂದರೆ ಶಾಲೆಯನ್ನು ಬಿಟ್ಟು ೨೦ ವರ್ಷಗಳ ನಂತರ ಅದೇ ಕಾರಿಡಾರ್ ಗಳಲ್ಲಿ ನಡೆಯುವಾಗ .... (ನೀವೇ ಊಹಿಸಿ... ಹೇಗಿರಬಹುದು)
....... ಮುಂದುವರೆಯುತ್ತದೆ.